Posted by admin on 2023-05-30 09:47:54 |
Share: Facebook | Twitter | Whatsapp | Linkedin
ಪಂಡಿತಹಳ್ಳಿ : ತುಮಕೂರಿನ ಜಿಲ್ಲೆಯ ಅತಿಶಯ ಕ್ಷೇತ್ರ ಮಂಧರಗಿರಿಯಲ್ಲಿ ಭಾನುವಾರ ದಿನಾಂಕ 28/05/2023 ರಂದು ಭಗವಾನ 1008 ಶ್ರೀ ಮಹಾವೀರ ಸ್ವಾಮಿಯವರ ಸಮವಶರಣದ ಮಂಡಲ ಪೂಜಾ ಮಹೋತ್ಸವವು ಅತೀ ವಿಜೃಂಭಣೆಯಿಂದ ನೆರವೇರಿತು.
ಕ್ಷೇತ್ರದ ಎಲ್ಲಾ ಜಿನಮಂದಿರಗಳಲ್ಲಿ ಪಂಚಾಮೃತ ಅಭಿಷೇಕದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಧ್ವಜಾರೋಹಣ, ಜಲಯಾತ್ರಾ ಮಹೋತ್ಸವ, ಸರ್ವದೋಷ ಪ್ರಾಯಶ್ಚಿತ, ಆರಾಧನೆ, ಚತುರ್ಮುಖ ಜಿನಭಗವಂತರಿಗೆ 216 ಕಳಸಗಳ ಮಹಾಭಿಷೇಕ ಹಾಗೂ ಮಹಾ ಮಂಗಳಾರತಿಯಲ್ಲಿ ಕೊನೆಗೊಂಡಿತು.
ಕಾರ್ಯಕ್ರಮವು ಶ್ರೀ ಕ್ಷೇತ್ರ ಸಿಂಹನಗದ್ದೆಯ ಪರಮಪೂಜ್ಯ ಆಚಾರ್ಯ ಶ್ರೀ 108 ಪಾವನಕಿರ್ತಿ ಮಹಾರಾಜರು ಮತ್ತು ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಷೇನ ಭಟ್ಟಾರಕ ಪಟ್ಟಾಚಾರ್ಯರ ಸಾನಿಧ್ಯದಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ತುಮಕೂರು ಗ್ರಾಮಾಂತರಾ ಕ್ಷೇತ್ರದ ಶಾಸಕರಾದ ಶ್ರೀ ಬಿ. ಸುರೇಶಗೌಡರನ್ನು ಆಹ್ವಾನಿಸಲಾಗಿತ್ತು. ಈ ಪೂಜಾ ಮಹೋತ್ಸವವು ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜೈನ ಮಂದಿರದ ಅಧ್ಯಕ್ಷರಾದ ಶ್ರೀ ಎಸ್. ಜೆ. ನಾಗರಾಜರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಪೂಜಾ ವಿಧಿ ವಿಧಾನಗಳನ್ನು ಪುರೋಹಿತರಾದ ಶ್ರೀ ಇಂದ್ರಕುಮಾರ, ಶ್ರೀ ಧರನೇಂದ್ರ ಕುಮಾರ ಹಾಗೂ ಶ್ರೀ ಚೇತನ ಪಂಡಿತ ರವರು ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ತುಮಕೂರಿನಿಂದ ಬರುವ ಭಕ್ತಾದಿಗಳಿಗೆ ಮಂಧರಗಿರಿವರೆಗೆ ವಾಹನದ ಸೌಲಭ್ಯವನ್ನು ಕಲ್ಪಿಸಲಾಗಿತ್ತು.